Thursday, March 19, 2009

ಕೈ ಚಳಕ!!

ಕೆಲವು ದಿನಗಳಿಂದ..ಅಲ್ಲ ಕೆಲವು ತಿಂಗಳಿಂದ ಒಂದು ಅನಿಸಿಕೆ.ಸುಮ್ಮನೆ ಹೊತ್ತಲ್ಲದ ಹೊತ್ತಲ್ಲಿ ಕಾಡುತ್ತಲೇ ಇದೆ. ಈಗ ನಂದು ಅಂತಾ ಒಂದು ಘಳಿಗೆ ಸಿಗೋದೆ ಕಷ್ಟ. ಅದರಲ್ಲಿಯೇ ಅಳಿದುಳಿದ ಕ್ಷಣಗಳಲ್ಲಿ ಒಮ್ಮೊಮ್ಮೆ ಧುತ್ತನೆ ಬಂದು ಕೈಹಿಡಿದು ಕೂಡಿಸಿಯೇಬಿಡುತ್ತದೆ.

ಹಾಗೆ ಹೇಳ್ಬೆಕು ಅಂದ್ರೆ ಅಲ್ಲಿ ಇದ್ದಿದ್ದು ಮರಳು ದಿನ್ನೆ, ಉಪ್ಪು ನೀರು, ಅದೆಷ್ಟೋ ಜನಕ್ಕೆ ಒಂದು ಸಂಜೆ. ಶನಿವಾರ ಬೆಳಿಗ್ಗೆಯಿಂದ ಊರು ಸುತ್ತಿದ್ರೂ ನೀನು ಜೊತೆಗೆ ಅಂತ ಸಿಕ್ಕಿದ್ದು ಅರೆ ಕ್ಷಣದ ನೋಟದಲ್ಲಿ, ಈಗ ಅದೂ ಕಾಣದ ಕತ್ತಲೆ. ಪ್ರೀತಿ ಜೊತೆಗಿದ್ರೆ ಮೈಯೆಲ್ಲ ಬಿಸಿ, ಅದು ಇದು ಅಂತಾರೆ. ನನಗೆ ಮಾತ್ರ ಗಾಳಿ ಸೊಕಿದಲ್ಲೆಲ್ಲ ಚಳಿ, ಮಾತು ನಡುಗುವಷ್ಟು.

ಹೆಜ್ಜೆ ನೋಡ್ತಾ ನಡೀತಿದ್ರೆ ಜನರ ಗದ್ದಲ, ಬಿಡದೇ ಹೊಡೆಯುವ ಅಲೆಗಳು, ಕೊನೆಗೆ ನಿನ್ನ ಇನಿದನಿಯ ಮಾತೂ ಕೇಳದಷ್ಟು ನಿಶ್ಯಬ್ದ. ಉರುಳುವ ಪ್ರತಿ ಕ್ಷಣಗಳನ್ನು ಅದೆಷ್ಟು ಶ್ರದ್ಧೆಯಿಂದ ಎತ್ತಿಕೊಳ್ತಾ ಇದ್ದೆ ಅಂದ್ರೆ ನನಗೇ ಆಶ್ಚರ್ಯ. ಮನಸಿನಲ್ಲಿ ಹುದುಗಿರುವ ನೂರಾರು ಅರಿವಿರದ ಭಾವನೆಗಳನ್ನು ಹತ್ತಿಕ್ಕುವ ಪ್ರಯತ್ನ. ನಿನಗೆ ಅದು ಗೊತ್ತಾಗದೆ ಇರಲಿ ಅನ್ನೊ ಸಣ್ಣ ನಿವೇದನೆ. ಹೆಜ್ಜೆಗಳು ಜೊತೆ ಆದ ಹಾಗೆ ಸಮಯಕ್ಕೆ ಅರಿವೇ ಇದ್ದಿಲ್ಲ.

ಅದು ಯಾವ ಘಳಿಗೆಯೊ, ಇನ್ನೂ ನೆನಪಾಗುತ್ತಿಲ್ಲ, ನಮ್ಮ ಕೈಗಳು ಬೆಸೆದುಕೊಂಡಿದ್ದವು. ಸ್ನೇಹದ ಆರ್ದ್ರತೆಗೋ ಅಥವಾ ಅದನ್ನೂ ಮೀರಿದ ಧನ್ಯತಾ ಭಾವಕ್ಕೊ! ದಿನ ಮುಗೀತಾ ಇರೊ ಸಂಕಟ ಹೆಚ್ಚಿದ್ದು ಆಗಲೇ. ಕೆಲವೊಮ್ಮೆ ಅನಿಸುತ್ತೆ, ಪ್ರೀತಿ ಹುಟ್ಟಿದ್ದು ಆಗಲೇ ಅಂತ. ಅರ್ಥ ಆಗ್ಲಿಕ್ಕೆ ಅದೆಷ್ಟೋ ಸಂಜೆಗಳು ಬೇಕಾದವು ಅಷ್ಟೇ.

ಬರೆಯುವುದು ಹೇಗೆ!!?

ಜೀವನದ ಪ್ರತಿ ಅಯಾಮದಲ್ಲಿ ನಿನ್ನ ನೆರಳು ಅದೆಷ್ಟು ತುಂಬಿದೆ ಅಂದರೆ ನೀನಿಲ್ಲದ ಕ್ಷಣಗಲು ಅಪರಿಚಿತವಾಗಿವೆ. ಕಾಯುವಿಕೆಯಲ್ಲಿ ಕಳೆದ ರಾತ್ರಿಗಳು, ಕಣ್ಣಲ್ಲಿ ಆರದ ಪಸೆ, ನಕ್ಕಾಗ ಬಿಟ್ಟ ನಿಟ್ಟುಸಿರು, ಸುಮ್ಮನೆ ಮೈಮೇಲೆ ಬಿದ್ದು ಕಾಡುವ ಒಂಟಿತನವೆಲ್ಲ ನಾ ಬರೆದ ಪದಗಳ ಸಾಲುಗಳಲ್ಲೇ ಉಳಿದಿವೆ. ನನ್ನನ್ನು ಇಷ್ಟು ಆವರಿಸಿಕೊಳ್ಳುತ್ತೀಯಾ ಅಂತ ಗೊತ್ತಿತ್ತು, ಆದರೆ ನನ್ನನ್ನೇ ಮರೆಯುತ್ತೇನೆ ಅಂದು ಕೊಂಡಿರಲಿಲ್ಲ. ಪ್ರೀತಿ ಹೆಪ್ಪುಗಟ್ಟುವುದು ಹೀಗೆ ಏನೊ.

ಲೇಖನಿಗೆ ಸಾಲಿತ್ತು
ಪ್ರತಿ ಕ್ಷಣಕ್ಕೊಂದು ವಿರಾಮ
ನೆನಪಲ್ಲೆ ಸಾಗಿತ್ತು
ಕನಸುಗಳ ಸಂಭ್ರಮ

ಮಾತೆಲ್ಲ ಮರೆತಿತ್ತು
ಅರ್ಥವಿಲ್ಲದ ಮೌನ
ಕಾರಣವೇ ಬೇಕಿತ್ತು
ಹುಸಿ ಮುನಿಸಿಗೂ ಕೂಡ

ನೀ ಬಂದೆ ಏನಿತ್ತು
ಹರಿವಿರದ ಜೀವನ
ಚಿಗುರೊಡೆದು ಮರೆತಿತ್ತು
ಬೇಸಿಗೆಯ ಮುನ್ನ

ಮುಂಜಾನೆ ಮೋಡ
ಸಂಜೆಗೊಂದು ತುಂತುರು
ದಿನವೆಲ್ಲ ಹಸಿರೆ
ಮನಸೆಲ್ಲ ತಂಪು

ಎದೆ ಗೂಡಿನ ತುಂಬ
ನಿನದೆ ಚಿತ್ತಾರ
ಪದಗಳೆಲ್ಲ ಮರೆತು
ಬರಲಾರವು ಹತ್ತಿರ

ಬರೆದಿದ್ದೆಲ್ಲ ಮೌನಕ್ಕೆ ಮುಗಿದಿವೆ, ಮಾತುಗಳಿಗೆ ಹುಡುಕಬೇಕು.